Description
ಕವಿತೆಗೆ ಭಾಗ್ಯವಿದ್ದರೆ ಅದಕ್ಕೆ ಮೂರು ಜೀವನಗಳು ಸಾಧ್ಯ. ಕವಿ ಅದನ್ನು ಸೃಷ್ಟಿಸಿದಾಗ ದೊರೆಯುವುದು ಅದರ ಮೊದಲ, ಪ್ರಾಥಮಿಕ ಜೀವನ – ಈ ಜೀವನವಿಲ್ಲದೆ ಇನ್ನೆರಡು ಜೀವನಗಳು ಸಾಧ್ಯವಿಲ್ಲ. ರಸಿಕ ಓದುಗರು ತಮ್ಮದೇ ರೀತಿಯಲ್ಲಿ ಅದನ್ನು ಓದಿ ಅರ್ಥೈಸಿದಾಗ ಅದರ ದ್ವಿತೀಯ ಜನ್ಮ. ಅದನ್ನು ಮೂಲ ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸಿದಾಗ ಅದಕ್ಕೆ ಮೂರನೇ ಜೀವನ ಪ್ರಾಪ್ತಿ. ಕವಿತೆಗೆ ಈ ಮೂರನೇ ಜೀವನ ಸಿಗುವುದು ಅಪರೂಪ. ನನ್ನ ಸಾವಿರಕ್ಕೂ ಹೆಚ್ಚು ಹಿಂದಿ ಕವಿತೆಗಳಲ್ಲಿ ಕೆಲವನ್ನು ಶ್ರೀ ಕಮಲಾಕರ್ ಭಟ್ ಅವರ ಕಲ್ಪನಾತ್ಮಕ ಸಾಹಸದ ಮೂಲಕ ಕನ್ನಡಕ್ಕೆ ಅನುವಾದಿಸಲಾಗುತ್ತಿದೆ ಎಂಬುದು ನನ್ನ ಅದೃಷ್ಟ ಮತ್ತು ತೃಪ್ತಿ.
ಅಶೋಕ್ ವಾಜಪೇಯಿ
ಕೇವಲ ಹಿಂದಿ ಮಾತ್ರವಲ್ಲದೇ ಇಡೀ ಭಾರತದ ವಿಶಿಷ್ಟ ಕವಿಗಳಾದ ಅಶೋಕ ವಾಜಪೇಯಿ ಅವರ ಕವಿತೆಗಳನ್ನು ಕನ್ನಡಕ್ಕೆ ತಂದು ಕಮಲಾಕರ ಕಡವೆ ಅವರು ನಮಗೆಲ್ಲ ದೊಡ್ಡ ಉಪಕಾರ ಮಾಡಿದ್ದಾರೆ. ಅವರ ಅನುವಾದ ಮೂಲ ಕವಿತೆಗಳ ಹೃದ್ಯತೆಯನ್ನು, ಆಹ್ಲಾದವನ್ನು ಉಳಿಸಿಕೊಂಡಿವೆ. ಕವಿಯೊಬ್ಬ ಕಾವ್ಯದಲ್ಲಿ ಮರೆಯಾಗುವಂತೆ ಇಲ್ಲಿ ಅನುವಾದಕರು ಮೂಲಕವಿತೆಯಲ್ಲಿ ಮರೆಯಾಗಿ, ಆ ಮೂಲ ನೇರವಾಗಿ ನಮ್ಮನ್ನು ಮುಟ್ಟುವಂತೆ, ತಟ್ಟುವಂತೆ, ತಡವುವಂತೆ ಮಾಡಿದ್ದಾರೆ.
ಎಚ್ ಎಸ್ ಶಿವಪ್ರಕಾಶ
ಅಶೋಕ ವಾಜಪೇಯಿ ಅವರ ಕಾವ್ಯದ ಓದು ಸಂವೇದನಾಶೀಲ ಮನಸಿನೊಂದಿಗೆ ನಡೆಸುವ ಸಂಭಾಷಣೆಯೂ ಹೌದು, ವಿದ್ವತ್ ವಿಷಯಗಳೊಂದಿಗೆ ನಡೆಸುವ ಅನುಸಂಧಾನವೂ ಹೌದು. ಭಾಷೆ, ಕಾವ್ಯ, ಶಬ್ದಗಳೆಲ್ಲ ಅವರ ಕವನಗಳಲ್ಲಿ ಮಾನವೀಯ ಮೌಲ್ಯಗಳ ದ್ವಾರಪಾಲಕರು. ಸಮಾಜದ ಸೌಖ್ಯಕ್ಕೆ ಭಾಷೆ ನಿರ್ಣಾಯಕವಾಗಿರುತ್ತದೆಂದು ಅವರ ನಂಬಿಕೆ. ಪರಂಪರೆ ಹೇಳುವ ಪಂಚ ಮಹಾಭೂತಗಳಿಗೆ, ಆರನೆಯ ಮೂಲಧಾತುವಾಗಿ ಅಶೋಕ ವಾಜಪೇಯಿ ಭಾಷೆಯನ್ನು ಸೇರಿಸುತ್ತಾರೆ. ನೆಲ, ಜಲ, ವಾಯು, ಆಕಾಶ ಮತ್ತು ಅಗ್ನಿಗಳ ದುರುಪಯೋಗ ಹಲಹತ್ತು ವಿನಾಶಗಳಿಗೆ ಕಾರಣವಾಗುವ ಹಾಗೆಯೇ, ಭಾಷೆಯ ದುರುಪಯೋಗವೂ ಕೂಡ ಮಾನವ ಕುಲದ ನಾಶದ ಸಂಕೇತ. ಕವಿಯೊಬ್ಬನ ವೈಯಕ್ತಿಕ ನೆಲೆಯಿಂದ ಸಾಮುದಾಯಿಕ ನೆಲೆಗಿರುವ ಸೇತು ಭಾಷೆ. ಸಮಾಜದ ಏಳಿಗೆ, ಮಾನವರಾಗಿ ನಮ್ಮೆಲ್ಲರ ಏಳಿಗೆಗೆ ಮೂಲಭೂತ ನೆಲೆ ಭಾಷೆಯಿಂದಲೇ ಒದಗುತ್ತದೆ ಎಂದು ಅವರ ಕಾವ್ಯವೂ, ಗದ್ಯ ಬರಹಗಳೂ ಒತ್ತಿಹೇಳುತ್ತವೆ.
ಕಮಲಾಕರ ಕಡವೆ





Reviews
There are no reviews yet.