
ನಾಟ್ಯದರ್ಪಣ
ಪ್ರೊ. ಎಂ.ಎ. ಹೆಗಡೆ ಮತ್ತು ವಿದ್ವಾನ್ ವಿಜಯಸಿಂಹ
೧೨ನೆಯ ಶತಮಾನದ ಗುಜರಾತ್ ಪ್ರಾಂತ್ಯದಲ್ಲಿ ಬಾಳಿಬದುಕಿದ ರಾಮಚಂದ್ರ ಮತ್ತು ಗುಣಚಂದ್ರ ಎಂಬ ಜೈನ ಲೇಖಕರು ರಚಿಸಿದ ನಾಟಕ ಮೀಮಾಂಸೆ ಕುರಿತ ಗ್ರಂಥ ‘ನಾಟ್ಯದರ್ಪಣ’. ನಾಲ್ಕು ವಿವೇಕ – ಅಥವಾ ಅಧ್ಯಾಯ – ಗಳಲ್ಲಿ ವಿಭಜಿತವಾದ ಈ ಕೃತಿಯು ಸೂತ್ರ/ಕಾರಿಕೆಗಳ ರೂಪದಲ್ಲಿದೆ. ಭಾರತದ ರಂಗಸಂಪ್ರದಾಯಗಳ ಆದಿಮಗ್ರಂಥವಾಗಿರುವ ಭರತಮುನಿಯ ‘ನಾಟ್ಯಶಾಸ್ತ್ರ’ವನ್ನೇ ಅನುಸರಿಸಿ ಸಾಗುವ ಈ ಕೃತಿಯು ತನಗಿಂತ ತುಸು ಮೊದಲು ರಚಿತವಾದ ಇನ್ನೊಂದು ಪ್ರಸಿದ್ಧ ಮೀಮಾಂಸಾ ಕೃತಿ ಧನಂಜಯನ ‘ದಶರೂಪಕ’ವನ್ನೂ ಹೋಲುತ್ತದೆ. ಮಾತ್ರವಲ್ಲ, ಕೆಲವು ವಿದ್ವಾಂಸರ ಪ್ರಕಾರ, ಅದು ‘ದಶರೂಪಕ’ವನ್ನು ಮೀರಿಸಬೇಕೆಂಬ ಪೈಪೋಟಿಯಲ್ಲಿ ರಚಿತವಾಗಿರುವಂತೆಯೂ ತೋರುತ್ತದೆ. ಮುಖ್ಯವಾಗಿ ರಸಸ್ವರೂಪವನ್ನು ವಿವರಿಸುವಲ್ಲಿ ಈ ಕೃತಿಯು ಹಿಂದಿನ ಗ್ರಂಥಗಳಿಗಿಂತ ತುಸು ಭಿನ್ನ ನಿಲುವನ್ನು ತಾಳುತ್ತದೆಯೆಂದೂ ಅಧ್ಯಯನಕಾರರು ಗುರುತಿಸಿದ್ದಾರೆ. ಇದುವರೆಗೂ ಕನ್ನಡಕ್ಕೆ ಅನುವಾದಗೊಂಡಿರದ ಈ ಕೃತಿಯು ಕನ್ನಡ ನಾಡಿನ ಸಾಹಿತ್ಯ-ರಂಗಭೂಮಿಗಳ ವಿದ್ವಾಂಸರಿಗೂ ವಿದ್ಯಾರ್ಥಿಗಳಿಗೂ ಉಪಯುಕ್ತವಾದೀತೆಂದು ಈ ಪ್ರಕಟಣೆ ನಂಬುತ್ತದೆ.
ಬೆಲೆ ರೂ 355/-

ಸೊಬಗಿನ ಹೊನಲು
ಎಚ್.ಎಸ್. ಶಿವಪ್ರಕಾಶ
ಕನ್ನಡದ ಸುಪ್ರಸಿದ್ಧ ಲೇಖಕ ಎಚ್. ಎಸ್. ಶಿವಪ್ರಕಾಶ್ ಅವರ ಕಾವ್ಯದ ಆಸಕ್ತಿ ಬಹುಮುಖಿಯಾದದ್ದು. ಪ್ರಮಾಣ ಮತ್ತು ಗಾತ್ರಗಳೆರಡರಲ್ಲೂ ಅವರ ಬರಹಗಳಲ್ಲಿ ಕಾವ್ಯದ ಪಾಲೇ ಹೆಚ್ಚು. ಮಾತ್ರವೇ ಅಲ್ಲ, ಅವರು ಈಗಾಗಲೇ ಹಲವು ಭಾರತೀಯ ಮತ್ತು ವಿದೇಶಿ ಭಾಷೆಗಳಿಂದ ಕಾವ್ಯವನ್ನು ಕನ್ನಡೀಕರಿಸಿದ್ದಾರೆ; ಆಧುನಿಕಪೂರ್ವದ ಹಲವು ಮಹತ್ವದ ಕವಿಗಳ ಜತೆಗೆ ಅನುವಾದವೂ ಸೇರಿದಂತೆ ಬೇರೆಬೇರೆ ನೆಲೆಗಳ ಅನುಸಂದಾನ ನಡೆಸಿದ್ದಾರೆ. ಅವರ ಇಂಥ ಎಲ್ಲ ಪೂರ್ವಕಾರ್ಯಗಳ ಒಂದು ಮುಂದುವರಿಕೆಯೋ ಎಂಬಂತೆ ಆದಿಶಂಕರರದೆಂದು ಹೇಳಲಾಗುವ `ಸೌಂದರ್ಯಲಹರಿ’ ಪಠ್ಯವು ಅವರಿಂದ ಕನ್ನಡಕ್ಕೆ ಬರುತ್ತಿದೆ. ‘ಸೌಂದರ್ಯಲಹರಿ’ ಪಠ್ಯಕ್ಕೆ ಹಲವು ಆಯಾಮದ ಓದುಗಳು ಸಾಧ್ಯವಿದೆ – ಅದನ್ನು ಕಾವ್ಯಾಸ್ವಾದನೆಗಾಗಿ ಓದುವುದರಿಂದ ಆರಂಭಿಸಿ ತಾಂತ್ರಿಕ ಸಾಧನೆಯ ಮಾರ್ಗವಾಗಿ ಬಳಸುವವರೆಗೆ ಆ ನೆಲೆಗಳು ವಿಸ್ತರಿಸಿಕೊಂಡಿವೆ. ಶಿವಪ್ರಕಾಶರ ಪ್ರಸ್ತುತ ಅನುವಾದವು ಆ ಪಠ್ಯದ ಇಂಥ ನೆಲೆಗಳೆಲ್ಲವನ್ನೂ ಒಟ್ಟಯಿಸುವುದಕ್ಕೆ ಮಾಡಿರುವ ಒಂದು ಪ್ರಯೋಗ ಎಂಬಂತಿದೆ.
ಬೆಲೆ ರೂ 200/-

ಕಮಲೆ ಮಲಗಿದ್ದಾಳೆ
ಸಮುದ್ಯತಾ ವೆಂಕಟರಾಮು
ಸಮುದ್ಯತಾ ಅವರ ಸಂಪೂರ್ಣ ಗಮನವು ಹೆಣ್ಣು ಜೀವನದ ಗೂಢತೆ, ನೋಡಲು ಸ್ವತಂತ್ರ ಬದುಕು ಎನಿಸಿದರೂ ಅಗೋಚರ ಶಕ್ತಿಯೊಂದರಿಂದ ನಿಯಂತ್ರಿಸಲ್ಪಡುವ ಸ್ತ್ರೀ ಬದುಕಿನ ಅನೂಹ್ಯ ಏರಿಳಿತಗಳು, ಸದ್ದಿಲ್ಲದೆ ಅವೆರಡನ್ನೂ ಉಣ್ಣುವ ಮೇಲ್ಮಧ್ಯಮ ವರ್ಗದ ಗೃಹಿಣಿಯೊಬ್ಬಳ ಒಳ ತಾಕಲಾಟಗಳನ್ನು ಹಿಡಿದಿಡುವುದರಲ್ಲಿ ಮಗ್ನಗೊಂಡಿದೆ. ಒಂದಿಲ್ಲ ಇನ್ನೊಂದು ತೆರದಲ್ಲಿ ಅವರ ಕಾವ್ಯದ ಸ್ಥಾಯೀಭಾವವು ಈ ಗೂಢವನ್ನು ಒಡೆಯಬಯಸುವ ಸ್ತ್ರೀ ಮನವೊಂದರ ಸದ್ದಿಲ್ಲದ ಹೋರಾಟವೇ ಆಗಿದೆ…
ಲಲಿತಾ ಸಿದ್ಧಬಸವಯ್ಯ
ಕೊಂಕಿಲ್ಲದ, ದ್ವೇಷವಿಲ್ಲದ, ಪ್ರೀತಿಯ, ಸ್ನೇಹದ ಸಹಜ ಸ್ಪಂದನೆಯ ಹುಡುಕಾಟ ಇಲ್ಲಿರುವ ಬಹುತೇಕ ಕವನಗಳ ವಸ್ತು…
ದೇವೇಂದ್ರ ಬೆಳೆಯೂರು
ಬೆಲೆ ರೂ 200/-

ಊರೆಂಬ ಉದರ
ಪ್ರಮೀಳಾ ಸ್ವಾಮಿ
ಜೀವನದ ಮುಖ್ಯ ಕರ್ತವ್ಯ ಮುಗಿದ ಮೇಲೆ ಹಿರಿಯ ಜೀವವೊಂದು ಜಗಲಿಯಲ್ಲಿ ಮನೆ ಮಂದಿಯೊಂದಿಗೆ, ತನ್ನ ಸಂದಕಾಲದ ಮಾಯೆಯನ್ನು ಮೆಲುಕುವಂತೆ ಸುರುವಾಗುವ ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನ್ನಿಸದಂತೆ, ಮುಂದಣ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ ಪ್ರಸ್ತಾಪವಾಗಿದೆ. ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪ್ರಾಪ್ತವಾಗಿದೆ. ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯೇ ಅಲ್ಲ ಆಗಿಸಿದೆ.
– ವೈದೇಹಿ
ಒಂದು ಊರಿನಲ್ಲಿ ಬದುಕಿ ಬಾಳಿದ ಲೇಖಕಿಯ ಸ್ಮೃತಿಚಿತ್ರ, ಹಾಗೆಯೇ ಒಂದು ಸಮುದಾಯದ ಆಹಾರ ಪದ್ಧತಿಯನ್ನು ಕುರಿತ ಪಾಕಶಾಸ್ತ್ರದ ಕೈಪಿಡಿ. ಹೀಗೆ, ಲೇಖಕಿಯು ತನ್ನ ಬಾಲ್ಯದ ಸ್ಮೃತಿಗಳನ್ನು ಹಾಗೂ ತನ್ನ ಸಮುದಾಯದ ವಿಶಿಷ್ಟ ಖಾದ್ಯಗಳ ತಯಾರಿಕೆಯ ವಿವರಗಳನ್ನು ಒಂದು ಹದದಲ್ಲಿ ಬೆರೆಸಿ ಈ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
– ಸಿ.ಎನ್. ರಾಮಚಂದ್ರನ್
ಬೆಲೆ ರೂ 320/-

































































































