Description
`ಬೆಳದಿಂಗಳ ಸೋನೆಮಳೆ’ ಸಂಕಲನದಲ್ಲಿ ಆಡುಮಾತಿನ ಧಾಟಿ, ಸ್ಥಳದ ಪ್ರಜ್ಞೆ, ಗತದ ರೂಪಾಂತರ, ಸಂವಾದದ ತುರ್ತು, ಇವೆಲ್ಲ ಹಾಸುಹೊಕ್ಕಾಗಿರುವ ಅಪರೂಪದ ಕಾವ್ಯಪಾಕ ವಿದೆ. ಸಿಂಬಲಿಸ್ಟರ ಪ್ರಕಾರ ಕಾವ್ಯವೆನ್ನುವುದು ಮನಸ್ಸಿನ ಒಂದು ಸ್ಥಿತಿ. ಆ ಸ್ಥಿತಿಗೆ ಕಾರಣವಾದ ವಿದ್ಯಮಾನ ಯಾವುದೇ ಆಗಿರಲಿ, ಅದರ ಸ್ವರೂಪ ಧ್ವನಿಪೂರ್ಣವಾಗುವುದು ರೂಪಕಗಳ ನೆರವಿನಿಂದ. ಪ್ರಜ್ಞಾ ಮತ್ತೀಹಳ್ಳಿ ಅವರಂಥ ಸಮರ್ಥ ಕವಿಗಳು ರೂಪಕಸೃಷ್ಟಿಯಲ್ಲಿ ಧಾರಾಳಿಗಳೇನಲ್ಲ. ಆದರೆ ಅವರು ಸೃಷ್ಟಿಸುವ ಒಂದೊಂದು ರೂಪಕವೂ ಅನುಭವದ ಇಡೀ ಶ್ರೇಣಿಯನ್ನು ಬಿಂಬಿಸುವಷ್ಟು ಶಕ್ತವಾಗಿರುತ್ತದೆ. ಇಲ್ಲಿನ ಹಲವು ಕವನಗಳಲ್ಲಿ ಅಂಥ ರೂಪಕಗಳಿದ್ದು ಅವು ಸಹಜವಾಗಿಯೇ ಓದುಗರನ್ನು ಸೆಳೆದುಕೊಳ್ಳುತ್ತವೆ. ಇಪ್ಪತ್ತನೇ ಶತಮಾನದ ಯುರೋಪಿನ ಕೆಲವರು ಕಲಾವಿದರು ವಸ್ತುಗಳಿಗಿಂತ ಮಿಗಿಲಾಗಿ ಅವುಗಳ ಮೇಲೆ ಬಿದ್ದ ಬೆಳಕನ್ನು ಚಿತ್ರಿಸುವತ್ತ ಸಾಗಿದರಷ್ಟೆ. ಇದು ಒಂದು ದೃಷ್ಟಿಯಿಂದ ವಾಸ್ತವವನ್ನು ಹೇಗೋ ಹಾಗೆ ಭ್ರಾಮಕವಾದುದನ್ನೂ ಒಳಗೊಳ್ಳುವ ವಿಧಾನ. ಉದಾಹರಣೆಗೆ ಇಲ್ಲಿರುವ `ಮದುವೆ ಫೋಟೋ’ ಎಂಬ ಕವನ ಒಂದು ಫೋಟೋದ ನೆವದಿಂದ ಏನೆಲ್ಲಾ ಹೇಳುತ್ತದೆ ನೋಡಿ. ಇನ್ನೊಂದು ವಿಶೇಷವೆಂದರೆ ಇಲ್ಲಿನ ಕೆಲವು ಕವನಗಳು ಇಡಿಯಾಗಿ ಪ್ರತೀಕವಾಗುವ ಪರಿ. ನಿದರ್ಶನಕ್ಕಾಗಿ `ನಿಲುವುಗನ್ನಡಿ’, `ಗಿಳಿಗೂಟ’ ಕವನಗಳನ್ನು ನೋಡಬೇಕು. ಪ್ರಜ್ಞಾ ಅವರ ಕಾವ್ಯ ಭಾಷಿಕ ಧ್ವನಿಯ ವರ್ಣಗಳನ್ನೋ ಶಬ್ದಸಾಮರಸ್ಯವನ್ನೋ ಅವಲಂಬಿಸುವುದಕ್ಕೆ ಬದಲಾಗಿ ಒಟ್ಟಾರೆ ಭಾವದ ಸಾಕ್ಷಾತ್ಕಾರವನ್ನು ಅವಲಂಬಿಸುತ್ತದೆ. ಹಾಗಾಗಿ `ಮರೆತ ರಾಗದ ಮಿಡಿತ’ ಕವನದಲ್ಲಿ ಬರುವ ಒಂದೊಂದು ಚಿತ್ರವೂ ಅಂತರಂಗದ ಅಭೀಪ್ಸೆಯ ಸುಕುಮಾರತೆಯನ್ನು ಬಿಂಬಿಸುವ ಕೇಂದ್ರ ಪ್ರತಿಮೆಯಾಗುತ್ತದೆ. ಈ ಕವನಗಳಲ್ಲಿ ಹೊಸ ನುಡಿಗಟ್ಟುಗಳಿವೆ, ಭಾವಕ್ಕೆ ತಕ್ಕ ಲಯವಿದೆ, ಅಮೂರ್ತವನ್ನು ಮೂರ್ತಗೊಳಿಸಬಲ್ಲ ಪ್ರತಿಭೆಯಿದೆ. `ಮದುವೆ ಫೋಟೋ’, `ಮಧ್ಯಾಹ್ನದ ಮೂರು ಹೊತ್ತು’, `ಬಂದಿಖಾನೆಯಲ್ಲಿ’, `ಹಳೆ ಕಪಾಟು’, `ಕದ ತೆರೆವ ಮುನ್ನ’, `ಚುಕುಬುಕು ಚುಕುಬುಕು’, `ಬಿಳಿ ಪಾರಿವಾಳ’ ಮುಂತಾದ ನಿಜಕ್ಕೂ ಯಶಸ್ವೀ ಕವನಗಳಿರುವ ಸಮೃದ್ಧ ಸಂಕಲನವಿದು.
ಎಸ್. ದಿವಾಕರ್





Reviews
There are no reviews yet.