Description
ಎಸ್.ಎಸ್.ಎಲ್.ಸಿಗೆ ಓದಿಗೆ ಮಂಗಳ ಹಾಡಿ ಮನೆಯಲ್ಲಿ ಕಸೂತಿ ಹಾಕುತ್ತಾ, ಅಡಿಗೆ ಕೆಲಸದಲ್ಲಿ ನೆರವಾಗುತ್ತಾ ಮುಂದೆ ಮದುವೆ ಯಾವಾಗ ಎಂದು ಆತಂಕದಲ್ಲಿ ಕಾಯುತ್ತಾ, ಬೆಳಗಿನಿಂದ ಸಂಜೆಯ ತನಕ ಗಾಣದೆತ್ತಿನಂತೆ ದುಡಿದು ಸಂಜೆ ಮುಖ ತೊಳೆದು, ತಲೆ ಬಾಚಿ ಹೂ ಮುಡಿದು ಕೈಯ್ಯಲ್ಲಿ ಒಂದು ಪುಸ್ತಕ ಹಿಡಿದು ಪುಸ್ತಕ ಪ್ರಪಂಚದಲ್ಲಿ ಕಳೆದು ಹೋಗುತ್ತಿದ್ದ ಹೆಣ್ಣು ಮಕ್ಕಳು ನೆನಪಾಗಿ, ಮನೆವಾರ್ತೆ, ಸಂಸಾರ, ಗಂಡ-ಮಕ್ಕಳು, ಬಸಿರು-ಬಾಣಂತನಗಳ ನಡುವೆ ನವೆದುದನ್ನೇ ನಾದಿ ನಾದಿ ನವಪಾಕವನ್ನು ಉಣಬಡಿಸಿದ ವೈದೇಹಿಯ ಬಗ್ಗೆ ಮೆಚ್ಚುಗೆ ಮೂಡಿ ವೈದೇಹಿಗೊಂದು ಗೌರವಗ್ರಂಥ ಕೊಟ್ಟರೆ ಹೇಗೆ ಎಂಬ ಸಣ್ಣ ಆಲೋಚನೆಯೊಂದು ಮೂಡಿತು. ಆವರು ಒಪ್ಪುವರೋ ಬಿಡುವರೋ ಕೇಳಿ ನೋಡೋಣ ಎನಿಸಿತು… ಅವರ ಕಥಾ ಪಾತ್ರಗಳೊಡನೆ ಬಂಧ-ಅನುಬಂಧ ಬೆಳೆಸಿಕೊಂಡವಳಾಗಿ ನಾನು ಧೈರ್ಯದಿಂದ, ವೈದೇಹಿಯವರನ್ನು ಕೇಳಿದೆ. ಅವರು ಒಂದೇ ಮಾತಿನಲ್ಲಿ `ಬೇಡ ಕಣೆ’ ಎಂದರು. ನಾನು ಬಿಡದೇ ಯಾಕೆ ಎಂದಾದರೂ ಹೇಳಿ ಎಂದೆ. `ಈ ಗೌರವ-ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಆದರೆ ಹಾಗೆ ಮಾಡಬೇಕು ಅಂತ ನಿಮಗೆ ಅನಿಸಿತಲ್ಲ ಅದು ದೊಡ್ಡದು, ಅಷ್ಟೇ ಸಾಕು, ಅದೇ ಗೌರವ’ ಎಂದರು. ನಾನು ಬಿಡದೇ ಅದೆಲ್ಲಾ ನಮಗೆ ಬಿಡಿ, ಒಪ್ಪಿಕೊಳ್ಳಿ, ಈ ಗೌರವ ಗ್ರಂಥಕ್ಕೆ ನೀವು ಒಂದು ನೆಪ ಅಷ್ಟೇ. ನಿಮ್ಮನ್ನು ಗೌರವಿಸುವ ಮೂಲಕ ಅಕ್ಷರಮಾಲೆಯನ್ನು ತೊಟ್ಟು ಸಂಭ್ರಮಿಸಿದ ಆ ನಿಮ್ಮ ತಲೆಮಾರನ್ನು ಗೌರವಿಸುತ್ತಿದ್ದೇವೆ ಎಂದುಕೊಳ್ಳಿ ಎಂದು ಭಿನ್ನವಿಸಿದೆ. ಏನನ್ನಿಸಿತೋ ಯೋಚಿಸಿ ಹೇಳುವೆ ಎಂದು ಹೇಳಿದವರು ಎರಡು ದಿನ ಬಿಟ್ಟು ಕರೆ ಮಾಡಿ, `ಇದೆಲ್ಲಾ ಬೇಕಾ? ಯೋಚಿಸು’ ಎಂದು ನನಗೇ ತಿರುಗುಬಾಣ ಬಿಟ್ಟರು. `ಕವಿತೆ, ಕಥೆ, ಕಾದಂಬರಿ, ಪ್ರಬಂಧಗಳು, ಮಕ್ಕಳ ನಾಟಕಗಳು, ಅನುವಾದ, ವ್ಯಕ್ತಿ ನಿರೂಪಣೆಗಳು, ಅಂಕಣ ಬರಹಗಳು, ಸಂಪಾದನೆ ಇಷ್ಟೆಲ್ಲಾ ಬರೆದಿರುವಿರಲ್ಲಾ? ಬರೋಬ್ಬರಿ ೧೦೦ ಕಥೆಗಳನ್ನು ಬರೆದಿರುವಿರಿ ಸಾಕಾ?’ ಎಂದು ನಗೆಯಾಡಿ, `ನಿಮ್ಮ ಒಪ್ಪಿಗೆ ಕೊಡಿ ಮಿಕ್ಕದ್ದು ನನಗೆ ಬಿಡಿ’ ಎಂದೆ. ಅದರ ಫಲವೇ ಈ ಹೊತ್ತಿಗೆ ಇರುವಂತಿಗೆ.
(ಸವಿತಾ ನಾಗಭೂಷಣ ಅವರ `ಮೊದಲ ಮಾತು’ಗಳಿಂದ)
Reviews
There are no reviews yet.