Description
…ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಎತ್ತಿ ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದುಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು; ಎಲ್ಲರ ನೋವು, ನಲಿವು, ಸಡಗರ ಮತ್ತು ಇದೆಲ್ಲದರ ಮಧ್ಯವೂ ಅರಳುವ ಬದುಕಿನ ಮಳೆಯ ಹಾತೆಯ ಒಂದು ಕ್ಷಣವನ್ನ ಹಿಡಿದಿಡಲು ಮೀಸಲಿಟ್ಟ ಈ ಕ್ಷಣವೊಂದು ನಿನ್ನನ್ನು ತಲುಪುವಲ್ಲಿ ಮಾತ್ರ ಧನ್ಯವಾಗಬಲ್ಲದು…
ಹಳ್ಳಿ ಕಣ್ಣುಗಳು ದಿಲ್ಲಿ ನೋಡುವವು. ಅವು ಕಾಣುವ ದೂರ ಆಳೆಯುವಲ್ಲಿ ಮೊದಲಾಗುತ್ತವೆ, ಇಲ್ಲಿಯ ಕತೆಗಳು. ಅಲ್ಲಿ ಎದುರಾಗುವ ನಗರ ನಾಗರಿಕತೆಯ ದುಗುಡತನವು ನಗರಕ್ಕೆ ಮೀಸಲಾಗದೆ ಆಧುನಿಕತೆಯ ಅಪರಮುಖವೇ ಆಗಿ ಅರಿವಿಗೆ ಬರುತ್ತದೆ. ಈ ಕಾಣ್ಕೆ ತೆರೆವ ಬದುಕಿನ ತರತರನ ಅಸಂಗತ ತರಗಳು ಏನು/ಏಕೆ, ಸರಿ/ತಪ್ಪುಗಳನ್ನು ಕಲೆಸಿ ವಾಸ್ತವಿಕತೆಯನ್ನು ಜಟಿಲ ಪ್ರಶ್ನೆಯಾಗಿ ತೋರುತ್ತವೆ.
ಈ ಕತೆಗಳಲ್ಲಿ ಸಹಜತೆ ಇಲ್ಲ ಸಾಧಾರಣ ಅನುಭವ ಇಲ್ಲ ಸರ್ವವೇದ್ಯವೂ ಇಲ್ಲ. ಯಾಕೆಂದರೆ ಇವು ಸಹಜ ಬದುಕಿನ ಸಾಧಾರಣ ಅನುಭವಗಳಲ್ಲಿ ಸರ್ವವೇದ್ಯವಾಗದೆ ಉಳಿವ ತಲೆಸಿಡಿತದಂತಹ ಬುಡವಿಲ್ಲದ ಬಾಳ ಬವಣೆಗಳನ್ನು ಶೋಧಿಸುತ್ತವೆ.
ಇಲ್ಲಿ ಕೆಲವೆಡೆ ಪಾತ್ರಗಳು, ಕಥನವು, ಕಥಾಹಂದರವು ಅಮುಖ್ಯವಾಗಿ ಅಲ್ಲಲ್ಲಿ ಅವಿತು ಹೊಳೆಯುವ ಐಡಿಯಾಗಳು ವಿಶೇಷವಾಗುತ್ತವೆ. ಮಾನವೀಯ ಸ್ಥಿತಿಯ ಅಮಾನವೀಯತೆ ಹಾಗು ವ್ಯಕ್ತಿಮತೆಯನ್ನು ಮೀರಿ ವ್ಯವಸ್ಥೆ ಧರಿಸುವ ಭೀಷಣತೆಗಳು ಈ ಕತೆಗಳಲ್ಲಿ ವಿಚಾರಗಳು, ವಿಧಾನಗಳು, ಪ್ರಹಸನವಷ್ಟೇ ಆಗುವುದನ್ನು ಚಿತ್ರಿಸುತ್ತವೆ.
ಈ ಸಾಹಿತ್ಯದ ಕೃತಿಯೊಳಗಿನ ಕ್ರಮ ಒಂದು ಕರ್ತವ್ಯಹೀನತೆ ಹಾಗು ಪಲಾಯನವಾದದಿಂದ ಪಾರಾಗಿ ಎಲ್ಲಿಯೋ ಹರಿವ ನದಿಯ ಹಗುರ ಸದ್ದುಗಳನ್ನು ಆಲಿಸುತ್ತ, ಅದು ಹೇಗೋ ಚಿಮ್ಮುವ ನಸುನಗುಗಳನ್ನು ಪಾಲಿಸುತ್ತ, ಮರೆಯಲಾಗದ ಪದ್ಯಗಳ ಪಲ್ಲವಿಯಂತೆ ಮತ್ತೆ ಮತ್ತೆ ಆಕಾಶದ ಅವಕಾಶವನ್ನು, ಸಮುದ್ರದ ಅಗಾಧತೆಯನ್ನು ತುಂಬಿಕೊಂಡು ನಲಿಸುತ್ತವೆ.
ಹಲವಿನೊಂದಿಗೆ ಹಲುಬದೆ, ಕೆಲವಿನೊಂದಿಗೆ ಕಲೆಯುವ ಆಸೆಯೇ ಕತೆಯಾಗುವ ಈ ಕಥಾಸಂಕಲನ ನವ್ಯೋತ್ತರದ ಕನ್ನಡ ಕಥಾಪರಂಪರೆಗೆ ಒಂದು ಬಹುಮುಖ್ಯ ಸೇರ್ಪಡೆ.
ಕಮಲಾಕರ ಕಡವೆ
…ಇದರ ಹಿಂದೆ ಹಲವು ಕಾಲದ ತುಡಿತ, ಪ್ರಯೋಗ, ಪರಿಶ್ರಮವಿದೆ. ಕನ್ನಡ ಕಥಾಪರಂಪರೆಯ ಅರಿವನ್ನು ಹೊಂದಿಯೇ ಭಿನ್ನವಾಗುವ, ತನ್ನತನ ಸಾಧಿಸಲು ನಿರಂತರ ಶ್ರಮಿಸುವ ಛಲವಿದೆ. ತೀವ್ರವಾದ ಪ್ರಜ್ಞಾಪರತೆ, ನಾಗರಿಕ ಚಿಕಿತ್ಸಕ ಸಂವೇದನೆ, ಬದುಕಿನ ರೂಕ್ಷಾತಿರೂಕ್ಷ ವಿವರಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಹವಣಿಕೆ ಮತ್ತು ತನ್ನತನದ ತೀವ್ರ ಹುಡುಕಾಟಗಳು ಓದುಗರನ್ನು ಆವರಿಸಿಕೊಳ್ಳುವ ಅಂಶಗಳೆನ್ನಬಹುದು…
ಬಿ.ಎನ್. ಸುಮಿತ್ರಾಬಾಯಿ
Reviews
There are no reviews yet.