Description
ಆದಿಶಂಕರರನ್ನು ಕೇಂದ್ರದಲ್ಲಿಟ್ಟುಕೊಂಡು ಅದ್ವೆ ತ ಮತ್ತು ಬೇರೆ ಭಾರತೀಯ ದರ್ಶನಗಳ ಲೋಕದಲ್ಲಿ ನಡೆಸಿರುವ ಒಂದು ಮಾನಸಿಕ ಪ್ರವಾಸ ಕಥನ ಈ ಪುಸ್ತಕ. ಆದಿಶಂಕರರನ್ನು ಕುರಿತ ಆಧುನಿಕ ಕಾಲದ ಅಪಕಲ್ಪನೆಗಳ ಚಿತ್ರಗಳನ್ನೊಳಗೊಂಡ `ಶಂಕರ ವಿಕಲ್ಪ’ ಎಂಬ ಕಂಡಿಕೆಯೊಂದಿಗೆ ಈ ಕಥನವು ಆರಂಭವಾಗುತ್ತದೆ. ಆಮೇಲೆ, ಶಂಕರರ ಚಿಂತನೆಗಳಲ್ಲಿ ನಂಬಿಕೆಯ ಪಾಲೆಷ್ಟು, ವೈಚಾರಿಕತೆಯ ಪಾಲೆಷ್ಟು? ಅವರ ವೈಚಾರಿಕತೆ ಯಾವ ಬಗೆಯದು? – ಮೊದಲಾದ ಪ್ರಶ್ನೆಗಳು `ಶಂಕರ ವಿಚಾರ’ ಎಂಬ ಅಧ್ಯಾಯದಲ್ಲಿ ಚರ್ಚಿತವಾಗಿವೆ. `ಶಂಕರ ದರ್ಶನ’ ಎಂಬ ಭಾಗವು ಅದ್ವೆ ತ ಸಿದ್ಧಾಂತಕ್ಕೆ ಅಡಿಗಲ್ಲಾಗಿರುವ ಅದರ ಲೋಕಾಕೃತಿಯನ್ನು ಭಾರತದ ಬೇರೆಬೇರೆ ದರ್ಶನಗಳ ಸಂದರ್ಭದಲ್ಲಿಟ್ಟು ಅವಲೋಕಿಸುತ್ತದೆ. ಮತ್ತು ಅಂಥ ದರ್ಶನಕ್ಕೆ ತಲುಪಲು ಈ ಮಾರ್ಗವು ರೂಪಿಸಿಕೊಂಡ ತಾರ್ಕಿಕ-ವೈಧಾನಿಕ ಕ್ರಮಗಳನ್ನು `ಶಂಕರ ವಿಧಾನ’ ಎಂಬ ಭಾಗವು ಗುರುತಿಸುತ್ತದೆ. ಬಳಿಕ, `ಶಂಕರ ಸಂವಾದ’ವೆಂಬೊಂದು ಅಧ್ಯಾಯವು ಅದ್ವೈತಕ್ಕೂ ಬೇರೆ ದರ್ಶನಗಳಿಗೂ ನಡೆದ ಕೊಡುಕೊಳ್ಳುವಿಕೆಯನ್ನು ಗುರುತಿಸುವ ಜತೆಗೆ, ಈ ದಾರ್ಶನಿಕತೆಯು ಒಂದು ಧಾರ್ಮಿಕನಂಬಿಕೆಯಾಗಿ ಕೆಲಸ ಮಾಡುವ ದಾರಿಗಳನ್ನು ಗಮನಿಸಿದೆ. `ಶಂಕರ ಅನ್ವಯ’ ಎಂಬ ವಿಭಾಗವು ಕಾವ್ಯಮೀಮಾಂಸೆಯಲ್ಲಿ ಶಂಕರ ದರ್ಶನವು ಅನ್ವಯಗೊಳ್ಳುವ ಸ್ವಾರಸ್ಯವನ್ನು ನೋಡುವ ಪ್ರಯತ್ನ ಮಾಡಿದೆ. ಆ ಚಿಂತನೆಯು ತನ್ನ ಕಾಲದ ಸಮಾಜ-ಸಮುದಾಯಗಳೊಂದಿಗೆ ಕಟ್ಟಿಕೊಂಡ ಸಂಬಂಧಗಳೇನಿರಬಹುದು – ಎಂಬ ಊಹೆಯು `ಶಂಕರ ಸಮಾಜ’ದಲ್ಲಿ ಹರಡಿಕೊಂಡಿದೆ. ಶಂಕರರ ವೈಯಕ್ತಿಕ ಬದುಕು ಮತ್ತು ಅದರ ಬಗೆಗಿನ ಐತಿಹ್ಯಗಳೂ `ಶಂಕರ ಚರಿತೆ’ ಎಂಬ ಅಧ್ಯಾಯದಲ್ಲಿ ಕೂಡಿಕೊಂಡಿವೆ. ಕಡೆಯದಾಗಿ, ಇಂಥ ಹುಡುಕಾಟದಿಂದ ದೊರಕುವ ಕೆಲವು ಆಲೋಚನಾ ಪ್ರಸ್ಥಾನಗಳು ಹೇಗೆ ಸಮಕಾಲೀನ ಗ್ರಹಿಕೆಗಳಿಗೆ ಸಹಾಯಕ – ಎಂಬ ಚಿಕ್ಕ ತಪಶೀಲು `ಶಂಕರ ಸಂಧಾನ’ವೆಂಬ ಗುಚ್ಛದಲ್ಲಿ ಕೂಡಿದೆ.
Reviews
There are no reviews yet.