Description
ಅಗಾಧವಾದ ಆತ್ಮವಿಶ್ವಾಸದಿಂದ, ಉಕ್ಕಟವಾದ ಒಳಮುಖೀ ಶೋಧನೆಯು ‘ಆ ದಾರಿ’ ಕಾವ್ಯದ ತುಂಬಾ ಹರಡಿಕೊಂಡಿದೆ. ಪ್ರಸ್ತುತ ಕವನ ಸಂಕಲನದಲ್ಲಿ ಜಯಸುದರ್ಶನರು ಕವನದಿಂದ ಕವನಕ್ಕೆ ವಿಶಿಷ್ಟವಾದ ಹಲವು ಹೊರ ‘ಆವರಣ’ಗಳನ್ನು ಸೃಷ್ಟಿಸುವಂತೆ, ಒಳ ‘ಆವರಣ’ಗಳನ್ನೂ ಸೃಷ್ಟಿಸುತ್ತಾರೆ. ಅಂತಃಕರಣದ ಶುಭ್ರತೆಯನ್ನು ಉಳಿಸಿಕೊಂಡೇ ಪರಿಪೂರ್ಣದೆಡೆಗೆ ಸಾಗುವ ಕಾವ್ಯದ ಕ್ರಮ ‘ಆ ದಾರಿ’ಯ ಸಂಕಲನದ ಬಹುಪಾಲು ಕವಿತೆಗಳ ಆಶಯವಾಗಿದೆ.
‘ಜಯಸುದರ್ಶನ’ರು ಮುಖ್ಯವಾಗಿ ಕಾಲದ ಹಲವು ಕಲ್ಪನೆಗಳನ್ನೂ ಪ್ರತೀಕಾತ್ಮಕವಾಗಿ ನೇಯುತ್ತ, ಪ್ರತಿಮೆಗಳಿಂದ ಪ್ರತಿಮೆಗಳಿಗೆ ಲಂಘಿಸುತ್ತ ನಡೆಯುವ ಗುಣ ಈ ಕವಿಯ ಉಕ್ತಿ ಕ್ರಮದ ಜಾಣ್ಮೆ ಮಾತ್ರವಲ್ಲ; ಅದರಲ್ಲಿ ತನ್ನ ಸಂಪೂರ್ಣ ವ್ಯಕ್ತಿತ್ವವನ್ನೂ ಅದ್ದಿ ತೆಗೆಯಬಲ್ಲ ಹುಮ್ಮಸ್ಸು, ಪ್ರತಿಭೆ ಮತ್ತು ಸಂವೇದನೆ ಏಕರೂಪೀ ಆಶಯದೊಂದಿಗೆ ವಿಸ್ಮಯವಾಗಿ ಬೆರೆಯುತ್ತಾ ಹೋಗುತ್ತದೆ! ವ್ಯಕ್ತಿ-ಸಮೂಹಗಳು ವಿಸ್ಮಯವೆಂಬಂತೆ ಕಳಚಿಕೊಂಡು ತನ್ನನ್ನೇ ‘ಪ್ರತಿಮೆ’ಯಾಗಿ ಒಡ್ಡಿಕೊಳ್ಳುವ ‘ನೈತಿಕ ಪ್ರತಿಮೆ’ಯಾಗುವ ನೆಲೆಗೆ ತಲಪುವುದು ಈ ಸಂಕಲನದ ಮಹತ್ವವನ್ನು ಹೆಚ್ಚಿಸುತ್ತಿದೆಯೆಂದು ನಾನು ತಿಳಿಯುತ್ತೇನೆ.
…ಜಯಸುದರ್ಶನರ ಕಾವ್ಯ ಅನ್ಯದೈವಕ್ಕೆಳೆಸದ ಧ್ಯಾನದ ಹುಚ್ಚಾಗಿ-ಅವರು ಕವಿತೆಯಿಂದ ಕವಿತೆಗೆ ಮತ್ತೆ ಮತ್ತೆ ಹೊಸ ಹೊಸ ಆಕಾರಗಳನ್ನು ಪಡೆಯುತ್ತ ಹೋಗುತ್ತಿದ್ದಾರೆಂದು ಅನ್ನಿಸುತ್ತದೆ. ‘ಕಾಲ ’ದ ಹುಚ್ಚು ಮಾಗಿ, ಪಕ್ವಗೊಂಡು ಫಲಿತವಾಗುವುದು ಸಮೃದ್ಧವಾದ ಸಂವೇದನೆಯ ಫಲದಿಂದ ಎಂಬ ಬಹುರೂಪೀ ಆಶಯವನ್ನು ಜಯಸುದರ್ಶನರ ಕಾವ್ಯ ಮತ್ತೆ ಮತ್ತೆ ಮೂಡಿಸುತ್ತದೆ. ‘ಆ ದಾರಿ’ ಕವನ ಸಂಕಲನದ ಸಾರ್ಥಕ ರಚನೆಗಳು ಈ ಹೊಸ ದಿಗಂತಗಳನ್ನು ಹುಡುಕಿ ಫಲಿಸುವ ‘ಆಟ’ದಲ್ಲಿ ಮಗ್ನವಾಗಿರುವುದು ಕುತೂಹಲಕರವಾದರೂ ಸತ್ಯ.
-ಮಲ್ಲೇಪುರಂ ಜಿ. ವೆಂಕಟೇಶ
Reviews
There are no reviews yet.