Description
‘ಶಕುಂತಲೆಯ ಗುರುತು’ ಕಾಳಿದಾಸನ `ಅಭಿಜ್ಞಾನಶಾಕುಂತಲ’ ನಾಟಕದ ಹೊಸ ಅವತರಣ. ಆಧುನಿಕ ಕನ್ನಡದ ಸರಿಸುಮಾರು ನೂರಿಪ್ಪತ್ತೈದು ವರ್ಷಗಳಲ್ಲಿ ಕಾಳಿದಾಸನ ಈ ಸುವಿಖ್ಯಾತ ಕೃತಿಗೆ ಇಪ್ಪತ್ತೈದಕ್ಕೂ ಹೆಚ್ಚು ಅನುವಾದಗಳು ಸಂದಿವೆ. ಕನ್ನಡದ ಪುರಾತನರೂ ಅಲ್ಲಿ ಇಲ್ಲಿ ಮುಟ್ಟಿ ತಟ್ಟಿ ನೋಡಿದ್ದೂ ಇದೆ. ಪಂಪನೇ ತನ್ನ ಎರಡೂ ಕಾವ್ಯಗಳಲ್ಲಿ ಶಾಕುಂತಲದ ಸರ್ವಾಂಗ ಸೌಷ್ಠವದ ಕೆಲವು ಪದ್ಯಗಳನ್ನು ಅನುವದಿಸಿ ಅಳವಡಿಸಿದ್ದಿದೆ. ಈಗ ಶ್ರೀ ಕೆ ವಿ ಅಕ್ಷರ ಮತ್ತೊಮ್ಮೆ ಕನ್ನಡಕ್ಕೆ ಕರೆತಂದಿದ್ದಾರೆ. ಇಂದಿನ ಕನ್ನಡದ ನುಡಿಗಟ್ಟು, ಪ್ರಾಸಗಳ ಲಯ ಮತ್ತು ಮಾತ್ರಾಛಂದಸ್ಸಿನ ಪದ್ಯಗಳ ಆವರಣದಲ್ಲಿ ಈ ಅನುವಾದ ಇಂದಿಗೆ ಆಪ್ತವಾಗಿದೆ. ಕಾಳಿದಾಸನ ನಾಟಕ ನಿರ್ಮಾಣ ಕೌಶಲದ ಪರಿಣತ ಪ್ರಜ್ಞೆಯ ತಿಳಿವಳಿಕೆಯ ಹಿನ್ನೆಲೆ ಈ ಅನುವಾದಕ್ಕೆ ಒದಗಿದೆ. ಮುಖ್ಯವಾಗಿ ಧ್ವನಿತತ್ತ್ವದ ಪ್ರಸ್ಥಾನಕಾರ ಆನಂದವರ್ಧನನ `ರಸಪರ ತಂತ್ರ’ದ ಪರಿಕಲ್ಪನೆಯಿಂದ ಈ ಅನುವಾದ ಮತ್ತು ರಂಗಪ್ರಯೋಗ ಪರಿಪುಷ್ಟವಾಗಿದೆ. ಈ ರಸಾಭಿಜ್ಞ ಪರಿಕಲ್ಪನೆಗೆ ಕಾಲಿದಾಸನ ಕೃತಿಯೇ ನಿದರ್ಶನವೆಂಬುದು ಸ್ವಯಂ ಆನಂದವರ್ಧನನದೇ ಮಾತು. ಇಲ್ಲಿಯ ತನಕ ಈ ಮಾತು ಅಷ್ಟಾಗಿ ಮುನ್ನೆಲೆಗೆ ಬಂದಿರಲಿಲ್ಲ. ಇದನ್ನು ಪ್ರತಿಬಿಂಬಿಸಿದ ಸವಿಸ್ತರ ಪ್ರಸ್ತಾವನೆಯನ್ನು, ಈ ಅನುವಾದದ ಓದಿಗೂ ನಾಟಕವನ್ನು ನೋಡುವುದಕ್ಕೂ ಮೊದಲು ಅವಲೋಕಿಸಿದರೆ ಆಸಕ್ತರಿಗೆ ಹೆಚ್ಚಿನ ಸಹಾಯವಾದೀತು. ನೀನಾಸಂ ವಿದ್ಯಾರ್ಥಿಗಳು ಪ್ರಯೋಗಿಸಿದ ನವನವೀನ ಎನ್ನಬಹುದಾದ ಈ ಕೃತಿಯ ರಂಗಪ್ರಯೋಗಕ್ಕೆ ಸಾಕ್ಷಿಯಾಗುವ ಅವಕಾಶ ನನಗೆ ಇತ್ತೀಚೆಗೆ ಒದಗಿತ್ತು. `ಬಲ್ಲವರ ಆಪರಿತೋಷವೆ ಪ್ರಯೋಗವಿಜ್ಞಾನ’ – ಇದು ಕಾಳಿದಾಸನದೇ ಮಾತು.
ಶ್ರೀರಾಮ ಭಟ್ಟ





Reviews
There are no reviews yet.